Tuesday, October 21, 2014

Sunday, October 12, 2014

శఙ్కర-మహామనన: వేదాంతముయొక్క కొన్ని మౌలిక భావాల చింతన

Dear Sādhakas,
   We are trying to upload and provide some of translations of Satchidānandendra Saraswati Swāmijis works, available in different languages.

About the book Śaṅkara-Mahā-Manana: Contemplation on Essential Vedāntic ideas.

Vedāntic ideas culled from Prasthāna-trayi bhāshya, along with their sources and explained in a simple and easily understandable way.

శఙ్కర-మహామనన గురించి:

ప్రస్థానత్రయీ భాష్యంలో తరచుగా వస్తున్న ఆత్మా, బ్రహ్మ మొదలగు భావాలు అతిసరళంగాను స్పష్టంగాను అతికొన్ని మాటంలో చప్పబడినవి. ఇందులో స్వామీజి ఆ భావాల మూలస్థానాల సంఖ్యలను కూడ ఇచ్చినారు.

Archive.Org page.

Download pdf from here.

Access all our uploaded books here.

Saturday, October 4, 2014

ಪ್ರಿಯ ಕೃಷ್ಣ - ಭಕ್ತಿಸರ್ವಸ್ವ; ಬೃಂದಾವನದ ಅಖಂಡಾನಂದರ ಸಾಹಿತ್ಯಮಾಲೆ

ಪ್ರಿಯ ಕೃಷ್ಣ 

ಅಖಂಡಾನಂದಸರಸ್ವತೀ ಅವರ ಭಕ್ತಿಸರ್ವಸ್ವ ಪುಸ್ತಕದ ಹಿಂದೀ ಲೇಖನಕ್ಕೆ ಒಬ್ಬ ಮಹಾತ್ಮರ ಕನ್ನಡಾನುವಾದ​.

ಶ್ರೀಕೃಷ್ಣ​! ನಾನರಿಯೆ, ಎಂದಿನಿಂದ ನಿನ್ನನು ನಾನು ಬಿಟ್ಟಿದ್ದೆನೆಂದು. ಸ್ವಲ್ಪ ಮಟ್ಟಿಗೆ ಅರಿತರೂ ಸರಿಯಾಗಿ ನೆನಪಾಗುತ್ತಲಿಲ್ಲ​. ಯುಗಯುಗಗಳು ಕಳೆದಿವೆ; ಜನ್ಮ ಜನ್ಮಗಳೇ ಕಳೆದು ಹೋಗಿವೆ. ಒಮ್ಮೆ ತೃಣವಾಗಿ ಜನರ ಪಾದದಡಿಯಲ್ಲಿ ತುಳಿಯಲ್ಪಟ್ಟಿದ್ದೆನು. ಒಮ್ಮೆ ಕಾಷ್ಠವಾಗಿ ಅಗ್ನಿಯಲ್ಲಿ ದಗ್ಧವಾಗಿ ಹೋಗಿದ್ದೆನು. ಕೆಲವೊಮ್ಮೆ ಹುಳಕೀಟಗಳಾಗಿ ಜನರನ್ನು ಪೀಡಿಸುತ್ತಿದ್ದೆನು. ಒಮ್ಮೊಮ್ಮೆ ಸಮುದ್ರದ ಭಯಂಕರವಾದ ಅಲೆಗಳ ಮೇಲೆ ತೇಲುತ್ತಿದ್ದೆನು. ಮತ್ತೆ ಕೆಲವೊಮ್ಮೆ ಅನೇಕ ಪಶುಪಕ್ಷಿಗಳ ಯೋನಿಯಲ್ಲಿ ಹುಟ್ಟಿ ಜನರ ಹೊಡೆತಕ್ಕೆ ಬಲಿಯಾಗಿದ್ದೆನು. ಯಾರು ಯಾರನ್ನೆಲ್ಲ ಕರೆದಿದ್ದೆನೋ, ಯಾರ ಚರಣಗಳನ್ನೆಲ್ಲ ಶರಣು ಹೊಕ್ಕಿದ್ದೆನೋ ನಾನರಿಯೆ. ಆದರೆ ಇದಂತೂ ನಿಶ್ಚಯ​, ನಿನ್ನನು ಮಾತ್ರ ಒಮ್ಮೆಯೂ ಕೂಗಿ ಕರೆಯಲಿಲ್ಲ​. ಎನಿತು ಸಲವೋ ಸ್ತ್ರೀಯಾಗಿ, ಜನರ ಭೋಗ್ಯವಸ್ತುವಾದೆನೋ ಮತ್ತೆಷ್ಟು ಸಲವೋ ಪುರುಷನಾಗಿ, ಎಷ್ಟು ಮಂದಿಯರ ಹೊಗಳುಭಟ್ಟನಾಗಿದ್ದೆನೋ ಎಂದು ನಾನರಿಯೆ. ಶ್ರೀಕೃಷ್ಣ​! ಒಮ್ಮೆಯಾದರೂ ನಾನು ನಿಜವಾಗಿ, ಮನಃಪೂರ್ವಕವಾಗಿ ನಿನ್ನನು ಶರಣು ಹೊಗಲಿಲ್ಲ​. ಒಮ್ಮೆಯೂ ನಿನ್ನನು ಆರ್ತಸ್ವರದಿಂದ ಕರೆಯಲಿಲ್ಲ​. ಏನು ಹೇಳಲಿ, ಕರೆಯಬೇಕೆನ್ನುವ ಇಚ್ಛೆಯೂ ಕೂಡ ಬಂದಿರಲಿಲ್ಲವಲ್ಲ​. ಅಮೃತವೆಂದೆಣಿಸಿ, ನಾನು ಕಾದಿರುವ ಕಬ್ಬಿಣದ ದ್ರವವನ್ನೇ ಪಡೆಯಲು ಓಡಿದೆ. ಅದರಿಂದ ಸುಟ್ಟು ಹೋಗಿ ಚಿನ್ನದ ದ್ರವವನ್ನು ಕುರಿತು ಓಡಿದೆ. ಅಲ್ಲಿಂದ ತಿರುಗಿ, ಲವಣಸಮುದ್ರಕ್ಕೆ ನೆಗೆದೆ. ಅಲ್ಲಿಯೂ ಹಸಿವು ಬಾಯಾರಿಕೆಯನ್ನು ಹೊಂದುತ್ತ ಜಲಚರಗಳ ಹೊಡೆತಗಳನ್ನು ತಿಂದೆ. ಎಲ್ಲಿಗೆ ತಾನೇ ಹೋಗಲಿಲ್ಲ​? ಯಾರ ಬಾಗಿಲಿಗೆ ತಾನೇ ತಲೆಯನ್ನು ಕುಟ್ಟಿಕೊಳ್ಳಲಿಲ್ಲ​. ಆದರೆ ಅಯ್ಯೋ ನನ್ನ ದುರ್ಬುದ್ಧಿಯೇ, ಒಮ್ಮೆಯಾದರೂ ನೀನು ನಿಜವಾದ ಸ್ವಾಮಿಯನ್ನು ಸ್ಮರಿಸಲೇ ಇಲ್ಲವಲ್ಲ​!

ಇದೆಲ್ಲವೂ ನಡೆಯುತ್ತಿತ್ತು. ಆದರೆ ಈ ಎಲ್ಲ ಬಾರಿ ಬಾರಿಯ ಭ್ರಮಣದಲ್ಲಿಯೂ ಒಂದು ಪ್ರೇರಣೆಯಿತ್ತು, ಶ್ರೀಕೃಷ್ಣನದು. ಹೌದು ಶ್ರೀಕೃಷ್ಣ​, ನಿನ್ನದೇ ಪ್ರೇರಣೆಯಿತ್ತು. “ನಾನು ನಿಜವಾದ ಸುಖವನ್ನು ಪಡೆಯುವೆನು, ನಿಜವಾದ ಶಾಂತಿಯನ್ನು ಪಡೆಯುವೆನು ಮತ್ತು ನನ್ನ ಸ್ವಾಮಿಯ ಸನ್ನಿಧಿಗೆ ತೆರಳಿ ನನ್ನ ಪ್ರಿಯತಮನನ್ನು ಅಪ್ಪಿಕೊಂಡು, ಶಾಶ್ವತವಾಗಿ ಅವನ ಹೃದಯದೊಡನೆ ಕೂಡಿಕೊಳ್ಳುವೆನು-ಒಂದಾಗಿ ಬಿಡುವೆನು” ಎಂಬ ಪ್ರೇರಣೆಯನ್ನೇ ನೀನು ಹೃದಯದಲ್ಲಿದ್ದುಕೊಂಡು ಮಾಡುತ್ತಿದೆ. ಇಚ್ಛೆಯು ನಿನ್ನದೇ ಕೊಡುಗೆಯಾಗಿತ್ತು. ಆದರೆ ನಾನು ಎಷ್ಟರ ಮಟ್ಟಿಗೆ ಉನ್ಮತ್ತನಾಗಿದ್ದೆನೆಂದರೆ ಈ ಹಂಬಲವೂ ಯಾರಿಂದ ಒದಗಿದೆ ಎಂದು ತಿಳಿಯದೇ ಇದ್ದೆ. ಮತ್ತು ಯಾರ ಬಳಿಗೆ ಹೋದರೆ ಈ ಬಯಕೆಯು ಈಡೇರುವದು ಎಂಬುದನ್ನೂ ಅರಿಯುತ್ತಿರಲಿಲ್ಲ​. ಅರಿಯದೆಯೇ ನಾನು ಅಜ್ಞಾತಪಥದಲ್ಲಿ ನಡೆಯಲಾರಂಭಿಸಿದ್ದೆ. ಅಲ್ಲಿಯೇ, ವಿಷಯಗಳಿಂದ ಸುಖಶಾಂತಿಗಳನ್ನು ಹುಡುಕಲಾರಂಭಿಸಿದ್ದೆ, ಎಲ್ಲಿ ಕನಸಿನಲ್ಲಿಯೂ ಕೂಡ ಅವುಗಳ ದರ್ಶನವೂ ದೊರೆಯಲಾರದೋ, ಅಲ್ಲಿ.

ಆದರೆ ನಾನೀಗ ತಿಳಿದುಕೊಂಡೆ. ನಾನು ತಿಳಿದುಕೊಂಡೆನೆಂದು ಹೇಗೆ ಹೇಳಲಿ. ನಿನ್ನ ಪ್ರೇಮಿಗಳಿಂದ ಕೇಳುತ್ತಿರುವೆನು. ನನ್ನ ಇಚ್ಛೆಯು, ಅನಂತ ಆನಂದದ ಮತ್ತು ಸುಖದ ಅಭಿಲಾಷೆಯು, ನಿಜವಾದದ್ದೇ ಎಂದು ನಿನ್ನ ಪ್ರೇಮಿಯರು ನಿನ್ನ ಯಾವ ಸಂದೇಶವನ್ನು ಹೇಳಿದ್ದಾರೋ, ಅದರಿಂದ ಊಹಿಸಿರುವೆನು. ಆದರೂ ಕೂಡ ನನ್ನ ಮಾರ್ಗವು ಸರಿಯಾಗಿರಲಿಲ್ಲ​. ಮರುಭೂಮಿಯಲ್ಲಿ ನಾನು ನೀರನ್ನು ಹುಡುಕುತ್ತಾ ಇದ್ದೆ. ಪ್ರಪಂಚದಲ್ಲಿಯೇ ಸುಖ ದೊರೆವುದೆಂದು ತಿರುಗುತ್ತಿದ್ದೆ. ಅಯ್ಯೋ! ಪ್ರಪಂಚದಲ್ಲಿ ಎಲ್ಲಿ ತಾನೇ ಸುಖ ಸಿಕ್ಕೀತು? ತಿರುಗುತ್ತಿದ್ದೆ. ಬಹಳವಾಗಿಯೇ ತಿರುಗುವದಾಯಿತು. ಗೊತ್ತಾಯಿತು, ಸುಖವು ನಿನ್ನ ಚರಣಗಳಲ್ಲಿಯೇ ಇದೆ ಎಂದು. ಈಗ​, ಪ್ರಭುವೇ! ನಿನ್ನ ಚರಣಗಳಿಗೆ ಬಂದಿದ್ದೇನೆ. ಈ ನಿನ್ನ ರಕ್ತವರ್ಣಪದತಲಗಳು, ಕಮಲಕ್ಕಿಂತಲೂ ಕೋಮಲವಾದ ಈ ನಿನ್ನ ಚರಣಗಳು, ಸರ್ವದಾ ನನ್ನ ಹೃದಯದಲ್ಲಿ ಸ್ನಿಗ್ಧವಾಗಿರಲಿ. ಇವುಗಳ ಶೀತಲದಿಂದ​, ನನ್ನ ಹೃದಯದಲ್ಲಿ ಧಗಧಗನೆ ಹೊತ್ತಿ ಉರಿಯುತ್ತಿರುವ ಅಗ್ನಿಯು ಶಮನವಾಗಿಲಿ. ಪ್ರಿಯತಮನೇ, ಒಂದು ಸಲ ನನ್ನ ವಕ್ಷಸ್ಥಲದಲ್ಲಿ ನಿನ್ನ ಚರಣಗಳನ್ನು ಇಟ್ಟುಬಿಡಪ್ಪ​!, ಇಟ್ಟುಬಿಡು!, ನನ್ನ ಈ ಒಂದು ಮಾತನ್ನು ಕೇಳಿಬಿಡು.

ಅಯ್ಯೋ! ನಾನೆಷ್ಟು ಮೂರ್ಖ​. ಹೃದಯದಾಳದಲ್ಲಿ ಈಗಲೂ ವಿಷಯದ ಹಂಬಲಿಕೆಯಿದೆ. ಆದರೂ ಬರಿಯ ಬಾಯಿಮಾತಿನಿಂದ ನಿನ್ನನ್ನು ಬೇಡುತ್ತಿದ್ದೇನೆ. ಇದರಿಂದಲೇ ನನಗೆ ಗೊತ್ತಾಗುತ್ತಿದೆ, ಹೇ ಶ್ರೀಕೃಷ್ಣ​! ನೀನು ದೂರದಿಂದಲೇ ನನ್ನನ್ನು ನೋಡಿ ನಗುತ್ತಿದ್ದೀಯ ಅಂತ​. ನನ್ನ ಹತ್ತಿರಕ್ಕೆ ಬರದೇ ಇದ್ದೀಯ ಅಂತ​. ನಿನ್ನ ಪ್ರೇಮಿಗಳ ಮೂಲಕ​, ನಿನ್ನ ದೂತರ ಮೂಲಕ​, ಕೇಳಿದ ಸಂದೇಶವನ್ನು ನಾನು ತಥ್ಯದಿಂದ ಈಗಲೂ ಗ್ರಹಣಮಾಡಲಿಲ್ಲ​. ಸ್ವಲ್ಪ ಹೊತ್ತು ಆ ಸಂದೇಶಗಳನ್ನು ಕೇಳಿದರೂ, ಮನಸ್ಸು ಅವುಗಳನ್ನು ಸರಿಯಾಗಿ ಗ್ರಹಿಸಲಿಲ್ಲ​. ನಿನ್ನ ಸಂದೇಶವು ನಿಜವೆಂದು ಮನದಟ್ಟಾಗಿದ್ದಿದ್ದರೆ, ‘ಶ್ರೀಕೃಷ್ಣ ಸ್ಮರಣೆಯಲ್ಲಿಯೇ ನಿಜವಾದ ರಸವಿದೆ’ ಎಂದು ಅದಕ್ಕೆ ವಿಶ್ವಾಸವಾಗುತ್ತಿತ್ತು. ‘ವಿಷಯಗಳಲ್ಲಿ ರಸವಿಲ್ಲ​’ ಎಂದು ಅನುಭವ ತಂದುಕೊಂಡು ಬಿಟ್ಟರೆ ಅದು ಮತ್ತೆ ವಿಷಯಗಳ ಕಡೆಗೆ ಕನಸಿನಲ್ಲಿಯೂ ತಿರುಗುವದಿಲ್ಲ​, ನಿನ್ನ ಚರಣಕಮಲದ ರಸಪಾನದಲ್ಲಿಯೇ ಮತ್ತವಾಗಿಬಿಡುತ್ತದೆ. ಈಗಿನ ಮನಸ್ಥಿತಿಯಲ್ಲಿ ಹೀಗೆ ನಡೆಯುವದಿಲ್ಲ​. ಆದರೆ ಶ್ರೀಕೃಷ್ಣ​! ನಾನು ಏನು ಮಾಡಲಿ? ಮನಸ್ಸನು ಒಪ್ಪಿಸುವದು ನನ್ನ ಕೈಯಲ್ಲಿಲ್ಲ​. ಅದು ಬಲಶಾಲಿಯಾಗಿದೆ. ತನ್ನ ಹಟದಲ್ಲೇ ಸಿಕ್ಕಿಕೊಂಡಿದೆ. ಕಾಮ​, ಕ್ರೋಧ​, ಲೋಭ ಮುಂತಾದವುಗಳೊಡನೆ ಮೈತ್ರಿ ಮಾಡಿಕೊಂಡಿದೆ. ಅದು ನಿನ್ನ ಸಂದೇಶವನ್ನು ಕೇಳಿಯೂ ಕೇಳದಂತೆ ವರ್ತಿಸುತ್ತಿದೆ. ಎಲ್ಲವನ್ನೂ ನೋಡುತ್ತಲೂ ಕೇಳುತ್ತಲೂ ಇದ್ದರೂ ಅಭ್ಯಾಸವಾಗಿರುವ ಮಾರ್ಗದಲ್ಲಿಯೇ ಅದು ಹೋಗುತ್ತಿದೆ.

ಇದಕ್ಕೆ ಉಪಾಯವೊಂದಿದೆ. ನೀನು ಸಂದೇಶವನ್ನು ಕಳಿಸುವದು ಬೇಡ​. ನೀನೇ ಬಾ. ನೀನೇ ಖುದ್ದಾಗಿ ಬಾ. ನನ್ನ ಮಾತನ್ನು ಕೇಳುತ್ತಿದ್ದೀಯ ಅಲ್ಲವಾ? ಒಂದು ಕ್ಷಣವಾಗಲೀ ನನ್ನ ಕಣ್ಣ ಮುಂದೆ ಪ್ರಕಟವಾಗು. ಸ್ವಲ್ಪ ಹೊತ್ತು ನನ್ನ ಹೃದಯದಲ್ಲಿ ಬಂದು ಕುಳಿತುಕೊಂಡು ಬಿಡು. ಅದರ ಬಳಿಕ ಸಂದೇಶದ ಸ್ಥಾನದಲ್ಲಿ, ‘ಹೇ ಮನವೇ, ನೀನು ನನ್ನದಾಗಿದ್ದೀಯ​. ನನ್ನ ಸೇವೆಯಲ್ಲಿರು. ಒಂದು ಕ್ಷಣವೂ ನನ್ನನ್ನು ಬಿಟ್ಟು ಹೋಗಬೇಡ​’ ಎಂದು ನಿನ್ನ ಬಾಯಿಂದಲೇ ಮನಸ್ಸಿಗೆ ಅಪ್ಪಣೆ ಮಾಡು. ಹೇ ನನ್ನ ಸರ್ವಸ್ವ​! ಶ್ರೀಕೃಷ್ಣ​! ಅದು ನಿನ್ನ ಆಜ್ಞೆಯನ್ನು ಪಾಲಿಸುತ್ತದೆ. ನಿನ್ನ ಅಪ್ಪಣೆಯನ್ನು ನಿಶ್ಚಯವಾಗಿ ಅದು ಪಾಲಿಸುವದು ಎಂದು ನನಗೆ ವಿಶ್ವಾಸವಿದೆ. ಹೀಗೆಯೇ ಮಾಡಿಬಿಡಪ್ಪ​. ನಾನು ಯಾವಾಗಲೂ ನಿನ್ನ ಸಾನ್ನಿಧ್ಯವನ್ನು ಹೊಂದಿರುವೆ. ಶ್ರೀಕೃಷ್ಣ​! ಏನು ಹೇಳುತ್ತಿಯ​? ‘ನಿನ್ನ ಹೃದಯವು ಕಲುಷಿತವಾದದ್ದು. ನಾನು ಬರುವದಕ್ಕೆ ಅದು ಯೋಗ್ಯವಾದದ್ದಲ್ಲ​. ನಿನ್ನ ಕಣ್ಣುಗಳು ದೂಷಿತವಾಗಿವೆ. ನನ್ನ ದರ್ಶನ ಪಡೆಯುವದಕ್ಕೆ ಅವುಗಳಿಗೆ ಯೋಗ್ಯತೆಯಿಲ್ಲ​’, ಹೀಗಲ್ಲವೇ ನೀನು ಹೇಳುವದು? ಆದರೆ ನನ್ನ ವಶದಲ್ಲಿ ತಾನೇ ಏನಿದೆ? ನನ್ನ ಕಣ್ಣುಗಳನ್ನು ಮತ್ತು ಹೃದಯವನ್ನು ಶುದ್ಧಿಗೊಳಿಸುವವರು, ಬೇರೆ ಯಾರು ತಾನೇ ಇದ್ದಾರೆ? ನೀನೇ ಖುದ್ದಾಗಿ ಪವಿತ್ರಗೊಳಿಸಿ, ಬಳಿಕ ಬಂದುಬಿಡು. ಅವುಗಳು ಶುದ್ಧವಾದ ಮೇಲೆಯೇ ನೀನು ಬರುವದಾದರೆ ಕೋಟಿಕಲ್ಪಗಳು ಕಳೆದರೂ ನಿನ್ನ ದರ್ಶನವನ್ನು ಪಡೆಯುವದಕ್ಕೆ ನಾನು ಯೋಗ್ಯನಾಗಲಾರೆನು. ಶ್ರೀಕೃಷ್ಣ​! ನೀನು ತುಂಬ ದಯಾಳುವಲ್ಲವೇ? ಮಹಾ ಭಕ್ತವತ್ಸಲನಲ್ಲವೇ? ‘ನಾನು ಪ್ರೇಮಪರವಶನು’ ಎಂದು ನೀನೇ ಅಂಗೀಕರಿಸಿರುವೆಯಲ್ಲವೇ? ... ಆದರೆ, ನಾನು ತಪ್ಪಿರುತ್ತೇನೆ. ನಾನು ಭಕ್ತನೇ ಅಲ್ಲ​. ನಾನು ನಿನ್ನನ್ನು ಪ್ರೇಮಿಸುತ್ತಲೂ ಇಲ್ಲ​. ನಾನು ನಿನ್ನ ದಯೆಗೆ ಪಾತ್ರವಾಗಿದ್ದೇನೆ ಎಂದು ನಿಜವಾದ ಹೃದಯದಿಂದ ಮನಸ್ಸಿಗೆ ಎನಿಸುತ್ತಲೇ ಇಲ್ಲ​. ಎಲ್ಲಿದೆ ಆ ದೀನಭಾವ ನನ್ನಲ್ಲಿ? ನಾನು ಅಭಿಮಾನದ ಮೂರ್ತಿಯೇ ಆಗಿದ್ದೇನೆ. ಹೀಗಿರುವಾಗ ನೀನು ನನ್ನ ಮೇಲೆ ದಯೆ ತೋರಿಸಲಾರೆ ಅಲ್ಲವೇ? ಶ್ರೀಕೃಷ್ಣ​! ಆದರೆ, ಈ ಅವಸ್ಥೆಯಲ್ಲಿರುವದರಿಂದಲೇ ನಾನು ವಾಸ್ತವವಾಗಿ ನಿನ್ನ ದಯೆಗೆ ಪಾತ್ರನಾಗಿದ್ದೇನೆ. ನಾನು ನನ್ನನ್ನು ದಯಾಪಾತ್ರನೆಂದು ತಿಳಿದಿದ್ದರೆ ದಯೆಗೆ ಪಾತ್ರನೇ ಆಗಿರುತ್ತಿದ್ದೆ. ಇದರಲ್ಲಿ ನಿನ್ನ ದಯಾಲುತಾ ಎಲ್ಲಿ ಬಂತು? ನನ್ನ ಸ್ಥಿತಿಯು ಎಷ್ಟು ದಯನೀಯವಾಗಿದೆಯೆಂದರೆ, ನಾನು ನನ್ನನ್ನು ದಯಾಪಾತ್ರನೆಂದು ತಿಳಿಯದೇ ಇರುತ್ತೇನೆ. ಆದ್ದರಿಂದಲೇ ನಾನು ನಿನ್ನ ದಯೆಗೆ ಪಾತ್ರನಾಗಿಬಿಟ್ಟಿದ್ದೇನೆ. ಇದು ಹೇಗೆಂದರೆ, ಭಯಂಕರ ರೋಗದಿಂದ ಪೀಡಿತವಾದ ಒಂದಾನೊಂದು ಪ್ರಾಣಿಯು ಉನ್ಮಾದದಿಂದ ತನ್ನ ರೋಗವನ್ನರಿಯದೆಯೇ ಇರುತ್ತದೆ. ಆದ ಕಾರಣವೇ ಜನರು ಅದರ ಮೇಲೆ ವಿಶೇಷದಯೆಯನ್ನು ತೋರಿಸುವರು. ಇದೇ ರೀತಿಯಲ್ಲಿ ಅಜ್ಞಾನವಶದಿಂದ ನನ್ನ ರೋಗವನ್ನರಿಯದೇ ಇರುವ ನಾನು, ನಿನ್ನ ದಯೆಗೆ ವಿಶೇಷಪಾತ್ರನಾಗದೆ ಇರುವೆನೇ?

ನಾನು ನಿನ್ನ ಲೀಲೆಯನ್ನು ಕೇಳಿದ್ದೆ. ನಿನ್ನ ಕಥೆಯನ್ನು ಶ್ರವಣ ಮಾಡಿದ್ದೆ. ನೀನು ಪತಿತರನ್ನು ಪತಿತಪಾವನರನ್ನಾಗಿ ಮಾಡುತ್ತೀಯ​. ಅಧಮರನ್ನು ಅಧಮರ ಉದ್ಧಾರದ ಸಾಧನರಾಗಿ ಮಾಡುತ್ತೀಯ​. ಪ್ರೇಮಿಗಳು ನಿನ್ನನ್ನು ಕುಣಿಸಲು ಕುಣಿಯುತ್ತೀಯ​. ಅವರು ಏನೇನು ಹೇಳುವರೋ ಅದನ್ನೆಲ್ಲ ನೀನು ಮಾಡುತ್ತೀಯ​. ನಿನ್ನ ಬಾಗಿಲಿಗೆ ಬಂದು, ನಿನ್ನ ಚರಣಗಳಲ್ಲಿ ಬಿದ್ದು ಬೇಡಿಕೊಳ್ಳುತ್ತೇನೆ - ಎತ್ತಿಕೊಳ್ಳೋ ನನ್ನನ್ನು. ‘ನೀನು ನನ್ನವನು’ ಎಂದು ಒಮ್ಮೆ ಹೇಳಿಬಿಡು. ಪ್ರಭುವೇ! ನನ್ನನ್ನು ಸ್ವೀಕರಿಸು. ಈ ಪ್ರಪಂಚವೆಲ್ಲವೂ ನಿನ್ನದೇ ಆಗಿದೆಯಲ್ಲವೇ? ಹೀಗಿರುವಲ್ಲಿ ನನ್ನನ್ನು ಹೊರಗಡೆ ನಿಲ್ಲಿಸುವದಕ್ಕೆ ಇಚ್ಛಿಸುತ್ತೀಯ​? ನಾನು, ನಿನ್ನವನೇ ಆಗಿರುವೆನಲ್ಲವೇ? ಮತ್ತೇ, ಹೀಗೆಂದು ಹೇಳುವದಕ್ಕೆ ಏಕೆ ನಿಧಾನ ಮಾಡುತ್ತಿದ್ದೀಯ​? ನನ್ನ ಸ್ವಾಮಿ! ನೀನು ನಗುತ್ತಿರುವೆ. ಏಕೆ ನಗುತ್ತಿರುವೆ? ನನ್ನ ಅಜ್ಞಾನವನ್ನು ಕುರಿತೇ? ಹೌದು, ನಾನು ನಗೆಗೆ ಯೋಗ್ಯನೇ ಆಗಿರುವೆನು. ‘ನೀನು ನನ್ನವನೇ ಆಗಿದ್ದೀಯ​. ಎಲ್ಲ ಅವಸ್ಥೆಗಳಲ್ಲಿಯೂ ನನ್ನವನಾಗಿಯೇ ಇದ್ದೀಯ​. ನಾನು ಯಾವಾಗಲೂ ನಿನ್ನನ್ನು ಬಿಡಲಿಲ್ಲ​’ ಎಂದು ನೀನು ಸಂಜ್ಞೆ ಮಾಡುತ್ತಿರುವೆ. ನಾಥ​! ಹೀಗೆಂದೇ ಅಲ್ಲವೇ ನೀನು ಹೇಳುವದು - ‘ನೀನು ಪಾಪವನ್ನು ಮಾಡುವಾಗಲೂ ನಿನ್ನ ಜೊತೆಗೆ ನಾನಿದ್ದೆ’ ಎಂದು. ‘ನಿನ್ನ ಹಿಂದೆ ನಿಂತುಕೊಂಡು ನಿನ್ನನ್ನು ನೋಡುತ್ತಾ ಇದ್ದೆ. ಒಂದು ಕ್ಷಣವೂ ಬಿಡಲಿಲ್ಲ​. ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ನೀನು ಮಾತ್ರ ನನ್ನನ್ನು ಬಿಟ್ಟಿದ್ದೀಯ​. ನನ್ನ ಕಡೆಯಿಂದ ಕಣ್ಣುಗಳನ್ನು ತಿರುಗಿಸಿಕೊಂಡು ಬಿಟ್ಟಿದ್ದೀಯ​. ಪ್ರಪಂಚದ ಸೌಂದರ್ಯದಲ್ಲಿ ಮುಗ್ಧನಾಗಿ ನನ್ನ ಕಡೆಗೆ ನೋಡುವದನ್ನೇ ಬಿಟ್ಟು ಬಿಟ್ಟೆ’. ಪ್ರಭುವೇ! ಇದು ಸತ್ಯ​. ನೀನು ಹೇಳುವದು ಸರಿಯೆ. ನೀನು ನನ್ನನ್ನು ಬಿಡಲಿಲ್ಲ​. ನೀನು ನನ್ನ ಮೇಲೆ ಅಮೃತವನ್ನೇ ವರ್ಷಿಸಿದ್ದೀಯ​. ಯಾವ ಅಗಮ್ಯಸ್ಥಳಕ್ಕೆ ಹೋಗಬಾರದೋ ಅಲ್ಲಿಗೆಲ್ಲ ನಿನಗೆ ನನ್ನ ಜೊತೆಯಲ್ಲಿ ಹೋಗಬೇಕಾಯಿತು. ಆದರೆ ಹೇ ಅನಂತಸ್ವರೂಪ​! ಈಗ ನನ್ನ ಪ್ರಮಾದವನ್ನು, ನನ್ನ ಅಪರಾಧವನ್ನು ಎಣಿಸದಿರು. ಈ ದೇಹವು, ಈ ಇಂದ್ರಿಯಗಳು, ಈ ಪ್ರಾಣವು, ಈ ಮನಸ್ಸು, ಬುದ್ಧಿ, ಅಹಂಕಾರ​, ಆತ್ಮ ಏನೇನಾಗಿ ನಾನು ಇದ್ದೆನೋ, ಇರುವೆನೋ, ಆಗುವೆನೋ ಅದೆಲ್ಲವೂ ನಿನ್ನದೇ ಆಗಿತ್ತು. ನಿನ್ನದಾಗಿಯೇ ಇರುವದು. ನಿನ್ನದೇ ಆಗುವದೂ. ಈಗ ‘ನಾನು ಈ ಸತ್ಯದಲ್ಲಿ ಸ್ಥಿರವಾಗುವೆನು ಮತ್ತು ಪ್ರತಿಕ್ಷಣವೂ ನಿನ್ನ ಚರಣಕಮಲಗಳನ್ನು ಹೃದಯದೊಡನೆ ಅಂಟಿಸಿಕೊಳ್ಳುವೆನು’ ಎಂದು ಈ ರೀತಿ ಕೃಪೆಮಾಡು. ನನ್ನ ಜೀವನಸರ್ವಸ್ವ​! ನನ್ನ ಪ್ರಾಣದ ಪ್ರಾಣ​! ನನ್ನ ಸ್ವಾಮಿ! ಯಾವದರಿಂದ ನನ್ನ ಸಮಸ್ತ ಅಹಂಕಾರವೂ ಮಮಕಾರವೂ ಸುಟ್ಟು ಬೂದಿಯಾಗಿ ಬಿಡುವದೋ ಆ ಪ್ರೇಮದ ಜ್ವಾಲೆಯನ್ನು ನನ್ನ ಹೃದಯದಲ್ಲಿ ದೀಪ್ತಗೊಳಿಸು. ಆಗ ಹೃದಯ ಮಂದಿರದಲ್ಲಿ ಕುಳಿತುಕೊಳ್ಳುವದಕ್ಕೆ ನಿನಗೆ ಸ್ಥಳ ಸಿಕ್ಕುವದು. ಪ್ರಿಯತಮನೇ! ಯಾವದರಿಂದ ಸಂಪೂರ್ಣ ಹೃದಯವು ಕರಗಿ ಕಣ್ಣೀರಾಗಿ ಕಣ್ಣುಗಳನ್ನು ತೊಳೆಯುವದೋ ಆ ನಿನ್ನ ವಿರಹವನ್ನು ನೀಡು. ಅದರಿಂದ ಕಣ್ಣುಗಳು ಎಲ್ಲೆಲ್ಲಿಯೂ ಯಾವಾಗಲೂ ನಿನ್ನ ಅನುಪಮವಾದ ರೂಪರಾಶಿಯ ಮಧುವನ್ನು ಕುಡಿದು ಮತ್ತವಾಗಲಿ.

ಪ್ರಭೋ! ನಿನಗಾಗಿ ವ್ಯಾಕುಲತೆಯನ್ನು ಕೊಟ್ಟುಬಿಡಪ್ಪ​. ನಿನಗಾಗಿ ನಾನು ತಳಮಳದಿಂದ ತಿರುಗುತ್ತಿರುವೆ --

ಹೇ ನಾಥ ರಮಣ ಪ್ರೇಷ್ಠ ಕ್ವಾಸಿ ಕ್ವಾಸಿ ಮಹಾಭುಜ । ದಾಸ್ಯಾಸ್ತೇ ಕೃಪಣಾಯಾ ಮೇ ಸಖೇ ದರ್ಶಯ ಸನ್ನಿಧಿಂ ॥
ಹೇ ನಾಥ ಹೇ ರಮಾನಾಥ ವ್ರಜನಾಥಾತಿನಾಶನ । ಮಗ್ನಮುದ್ಧರ ಗೋವಿಂದ ಗೋಕುಲಂ ವೃಜಿಣಾರ್ಣವಾತ್ ॥
ಹೇ ದೇವ ಹೇ ದಯಿತ ಹೇ ಭುವನೈಕಬಂಧೋ, ಹೇ ಕೃಷ್ಣ ಹೇ ಚಪಲ ಹೇ ಕರುಣೈಕಸಿಂಧೋ ।
ಹೇ ನಾಥ ಹೇ ರಮಣ ಹೇ ನಯನಾಭಿರಾಮ​, ಹಾ ಹಾ ಕದಾ ನು ಭವಿತಾಸಿ ಪದಂ ದೃಶೋರ್ನಃ ॥
ಯುಗಾಯಿತಂ ನಿಮೇಷೇಣ ಚಕ್ಷುಷಾ ಪ್ರಾವೃಷಾಯಿತಂ । ಶೂನ್ಯಾಯಿತಂ ಜಗತ್ಸರ್ವಂ ಗೋವಿಂದವಿರಹೇಣ ಮೇ ॥

ಶ್ರೀಕೃಷ್ಣ​! ಈ ಕಣ್ಣುಗಳು ನಿನ್ನನ್ನು ಬಿಟ್ಟು ಮತ್ತೊಂದನ್ನು ಯತಕ್ಕೆ ತಾನೇ ನೋಡವವು? ಬೇಕಾದರೆ ನೀನು ಇವುಗಳ ಮುಂದೆ ಬಂದು ನಿಂದುಕೊಳ್ಳೋ. ಅಲ್ಲದಿದ್ದರೆ ಅವುಗಳನ್ನು ಸುಟ್ಟು ಬಿಡು. ಈ ವಾಕ್ಕು ಮತ್ತೊಂದರ ಹೆಸರನ್ನ್ನು ಏಕೆ ತಾನೇ ತೆಗೆದುಕೊಳ್ಳುತ್ತಿದೆಯೋ? ಇದರಿಂದ​, ಬೇಕಾದರೆ, ನಿನ್ನ ಹೆಸರೇ ಬರಲಿ. ಇಲ್ಲದಿದ್ದರೆ ಇದು ನಷ್ಟವೇ ಆಗಲಿ. ಶ್ರೀಕೃಷ್ಣ​! ನನ್ನ ಕರ್ಣವು ನಿನ್ನ ಮಧುರ ಆಲಾಪವನ್ನೇ ಸೇವಿಸಲಿ, ನಿನ್ನ ಕೊಳಲಿನ ನಾದವನ್ನೇ ಕೇಳಲಿ. ಇಲ್ಲದಿದ್ದರೆ ಕಿವುಡಾಗಿಬಿಡಲಿ. ನನ್ನ ಚಿತ್ತವೃತ್ತಿಯು ಮತ್ತೇನನ್ನೂ ನೋಡದೆ ಇರಲಿ, ಕೇಳದೆ ಇರಲಿ, ಮುಟ್ಟದೆ ಇರಲಿ. ಏನು? ನನ್ನ ಚಿತ್ತವೃತ್ತಿಯೇ? ಅಲ್ಲ​. ಈ ಚಿತ್ತವೃತ್ತಿಯು ನಿನ್ನದೇ ಆಗಿದೆ. ಪ್ರಭುವೇ! ಇದನ್ನು ನಿನ್ನ ಚರಣಗಳಲ್ಲಿ ಇಟ್ಟುಕೊ. ನನ್ನ ದಯಾಳು ಪ್ರಭುವೇ! ಪ್ರೇಮಿ ಪ್ರಭುವೇ! ಇಟ್ಟುಕೊಳ್ಳಪ್ಪ​. ಇನ್ನು ತಡೆಯಲಾರೆ. ಚಿತ್ತವು ವಿವಶವಾಗುತ್ತಿದೆ. ಒಂದು ಸಲ ಕೃಪೆ ಮಾಡಿಬಿಡಪ್ಪ​. ನೀನು ಕೃಪೆ ಮಾಡಲೇಬೇಕು. ಕೃಪೆ ಮಾಡದೆಯೇ ನೀನು ಬದುಕಲೇ ಆರೆ. ಹೀಗಿರುವಾಗ ವಿಳಂಬವೇತಕ್ಕೆ? ಈಗಲೇ ಮಾಡಿಬಿಡಪ್ಪ​. ಇದೋ ನೋಡು. ಮುಖತಿರುಗಿಸಿ, ಕಣ್ಣು ಮಿಟುಕಿಸದೇ ನಿನ್ನನ್ನು ನೋಡುತ್ತಿದ್ದೇನೆ. ನಿನ್ನನ್ನೇ ನೋಡುತ್ತಿದ್ದೇನೆ. ನನ್ನ ಪ್ರಿಯಕೃಷ್ಣ​! ಪ್ರಿಯಕೃಷ್ಣ​! ಕೃಷ್ಣ​! ಕೃಷ್ಣ​! ಕೃಷ್ಣ​!

Thursday, October 2, 2014

ಮಾನಸಪೂಜೆ - ಭಕ್ತಿಸರ್ವಸ್ವ; ಬೃಂದಾವನದ ಅಖಂಡಾನಂದರ ಸಾಹಿತ್ಯಮಾಲೆ

ॐ गणेशाय नमः
आचार्येभ्यो नमः



ಮಾನಸಪೂಜೆ

ಮಾನಸಪೂಜೆಗೆ ಬೇಕಾದ ನಿಶ್ಚಯ
ಜೀವನಿಗೆ ಸುಖದಲ್ಲಿಯೇ ಸಹಜ ಪ್ರೇಮವಿರುತ್ತದೆ. ಎಲ್ಲರೂ ಸುಖವನ್ನು ಬಯಸುತ್ತಾರೆ. ಆದರೆ ಸುಖವು ಎಲ್ಲಿರುತ್ತದೆ, ಸುಖದ ಸ್ವರೂಪವೇನು, ಎಂಬ ವಿಷಯಗಳ ಬಗ್ಗೆ ಜನರ ತಿಳಿವಳಿಕೆ ಮಾತ್ರ ತಪ್ಪು ತಪ್ಪಾಗಿಯೇ ಉಳಿದಿದೆ. ಏತರಲ್ಲಿ, ಸುಖವಿರುವ ಸಂಭಾವನೆ ಇರಲಿ ! ಅದರ ಛಾಯೆಯೂ ಇಲ್ಲವೋ, ಅಂತಹ ವಸ್ತು ಮತ್ತು ವ್ಯಕ್ತಿಗಳಲ್ಲಿ ಜನರು ಸುಖವಿದೆಯೆಂದು ಗಟ್ಟಿಯಾಗಿ ನಂಬಿ ಕುಳಿತುಬಿಟ್ಟಿದ್ದಾರೆ. ಇಂತಹ ಪದಾರ್ಥಗಳಿಂದ ಹಗಲೂರಾತ್ರಿ ದುಃಖವೇ ಆಗುತ್ತದೆ. ಯಾವದೇ ನಶ್ವರ ವಸ್ತುವಿನಿಂದ ನಿತ್ಯ ಸುಖದ ಪ್ರಾಪ್ತಿಯಾಗುವದಿಲ್ಲ. ಇದರಿಂದ ನಮಗೆ ಬೇಕಾದದ್ದು ಪ್ರಪಂಚದ ಯಾವುದೋ ಒಂದು ವಸ್ತು ಅಥವಾ ವ್ಯಕ್ತಿ ಅಲ್ಲ ಎಂಬುದು ಸಿದ್ಧವಾಗುತ್ತದೆ. ನಮಗೆ ಬೇಕಾಗಿರುವದು ಅವಿನಾಶಿಯಾದ ಸುಖ -- ಮತ್ತು ಈ ರೀತಿ ಭಗವಂತನು ಮಾತ್ರ ಇದ್ದಾನೆ. ಮತ್ತಾತ ಕೃಷ್ಣನ ರೂಪದಲ್ಲಿ ಪ್ರಕಟನಾಗಿದ್ದಾನೆ. (ಲೇಖಕರು ಕೃಷ್ಣಭಕ್ತರು, ಆದರೆ ವಾಚಕ ಸಾಧಕರು ತಮ್ಮ ತಮ್ಮ ಇಷ್ಟದೇವತೆಯನ್ನು ಊಹಿಸಿಕೊಳ್ಳಬಹುದು) ನಮ್ಮ ಜೀವನದ ಸರ್ವಸುಖ, ಸಮಾಧಿ, ಬ್ರಹ್ಮ ಎಲ್ಲವೂ ಪ್ರೀತಿಯ ಕೃಷ್ಣನು ಮಾತ್ರ. ಈ ಶ್ಯಾಮಸುಂದರ, ನವಿಲುಗರಿಯವ, ಪೀತಾಂಬರಧಾರಿ, ನಂದಕಿಶೋರನೇ ನಮ್ಮ ಪ್ರಾಣಗಳ ಒಡೆಯ, ಹೃದಯೇಶ್ವರ -- ಹೀಗೆ ನಿಶ್ಚಯಬುದ್ಧಿ ಬಂದಾಗಲೇ ‘ಮಾನಸಪೂಜೆ’ ಪ್ರಾರಂಭವಾಗುತ್ತದೆ.

೧. ಶರೀರವು ಸ್ನಾನಾದಿಗಳಿಂದ ಶುದ್ಧವಾಗಲಿ. ಮನಸ್ಸು, ಸ್ಥಾನ ಮತ್ತು ಕುಳಿತುಕೊಳ್ಳುವ ಅಸನ ಇವೆಲ್ಲವೂ ಪವಿತ್ರವಾಗಿರಲಿ.

೨. ಪ್ರತಿದಿನ ಒಂದೇ ಸಮಯ ಮತ್ತು ಆಸನ ಹಾಗು ಸ್ಥಾನವಾದರೆ ಮನಸ್ಸಿಗೆ ಹಿತವಾಗುತ್ತದೆ. (ಪ್ರಾಥಮಿಕವಾಗಿ ಈ ನಿಯಮವನ್ನು ಪಾಲಿಸಬೇಕಾಗುತ್ತದೆ, ಇದರಿಂದ ಮನಸ್ಸಿಗೆ ಶುದ್ಧಿ ಬಂದು ಪ್ರಬುದ್ಧತೆಯು ದೊರೆತ ನಂತರ ಎಲ್ಲಾ ದೇಶಕಾಲಗಳೂ ಭಗವನ್ಮಯ ಎಂದೆನಿಸುವಾಗ ಈ ನಿಯಮ ಸಡಿಲಗೊಳ್ಳುತ್ತದೆ)

೩. ಪ್ರಪಂಚದ ಎಲ್ಲ ಚಿಂತೆಗಳನ್ನು ಬಿಟ್ಟು ನಿಶ್ಚಿಂತನಾಗಿ ‘ಸರ್ವದಾ ಭಗವಂತನ ಸೇವೆಯೇ ನನಗಿರಲಿ’ ಎನ್ನುವ ಸಂಕಲ್ಪವನ್ನು ಮಾಡಬೇಕು.

ಆಂತರಿಕ ಮತ್ತು ಬಾಹ್ಯ ವಿಘ್ನಗಳ ನಿವಾರಣೆಗಾಗಿ ಧ್ಯಾನ
೪. ಆಸನದಲ್ಲಿ ಕುಳಿತು ‘ಓಂ ರಂ’ ಈ ಮಂತ್ರದ ಜಪವನ್ನು ಮಾಡಿ ನಾಲಕ್ಕೂ ದಿಕ್ಕಿಗೂ ನೀರನ್ನು ಸಿಂಪಡಿಸುತ್ತಾ ‘ನನ್ನ ನಾಲ್ಕು ಬದಿಯಲ್ಲಿಯೂ ಅಗ್ನಿಮಯವಾದ ಗೋಡೆಯಿದ್ದು ನಾನು ಇದರಲ್ಲಿದ್ದು ಭಜಿಸುತ್ತಾ ಪೂಜಿಸುತ್ತಿರುವವರೆಗೂ ಯಾವ ವಿಘ್ನವೂ ಬರಲಾರದು’ ಎಂದು ಭಾವಿಸಬೇಕು.

‘ನಾನು ಪೂಜಿಸುತ್ತೇನೆ’ ಎಂಬ ಅಹಂ ಕಳೆಯುವದಕ್ಕಾಗಿ ಭಾವನೆ.
೫. ಮೊಟ್ಟಮೊದಲು ನನ್ನೆದುರಾಗಿ ಶಿರಸ್ಸಿನ ಮೇಲ್ಭಾಗದಲ್ಲಿ ಒಂದು ಕಮಲದ ಮೇಲೆ ನನ್ನ ಇಷ್ಟದೇವರು ಪ್ರತ್ಯಕ್ಷನಾಗಿದ್ದಾನೆ ಮತ್ತು ಅವನ ಉಗುರುಗಳ ಕಡೆಯಿಂದ ಅಮೃತದ ಧಾರೆಯು ಹರಿದು ಹರಿದು ನನ್ನ ತಲೆಯ ಮೇಲೆ ಬೀಳುತ್ತಿದೆ.  ಅದರಿಂದ ಒಳಹೊರಗೆ ಎಲ್ಲವೂ ಶುದ್ಧವಾಗುತ್ತಿದೆ. ನನ್ನ ಶರೀರವೀಗ ದಿವ್ಯವಾಗಿ ಭಗವಂತನ ಸೇವೆಗೆ ಯೋಗ್ಯವಾಗುತ್ತಾ ಇದೆ ಎಂದು ಭಾವಿಸಬೇಕು.

ದೈಹಿಕ ಮಾನಸಿಕ ಚಂಚಲತಾ ನಿವಾರಣೆಗಾಗಿ ಚಿಂತನೆ
೬. ಶೇಷನಾಗನ ಶಿರಸ್ಸಿನ ಮೇಲೆ ಭೂಮಿಯಿದೆ, ಹಾಗೆಯೇ ಅವನ ದೇಹದ ಮೇಲೆ ಭಗವಂತನು ಮಲಗಿದ್ದಾನೆ. ಶೇಷನೇನಾದರು ಸ್ವಲ್ಪ ಅಲುಗಾಡಿದರೂ, ಭೂಮಿಯೇ ಅಲುಗಾಡಿ ಬಿದ್ದುಬಿಡುವದು ಆದ್ದರಿಂದಲೇ ಆತ ಅಚಲವಾಗಿ ಸ್ಥಿರವಾಗಿ ಇರುತ್ತಾನೆ. ಹಾಗಾಗಿ ಅವನ ಸ್ಥಿರತೆಯನ್ನು ಧ್ಯಾನಿಸುವದರಿಂದ ನಮ್ಮ ಶರೀರವೂ ಸ್ಥಿರತೆಯನ್ನು ಪಡೆಯುತ್ತದೆ.

೭. ನಂತರ ಹೀಗೆಂದು ಭಗವಂತನನ್ನು ಪ್ರಾರ್ಥಿಸಬೇಕು -- ‘ಹೇ ಪ್ರಭುವೇ! ಎಲ್ಲಾ ವೇದ, ಶಾಸ್ತ್ರ, ಪುರಾಣ, ಸಂತರು, ಸದ್ಗುರುಗಳು ಹಾಗು ನೀನೂ ಕೂಡ ‘ಈಶ್ವರನು ಎಲ್ಲರ ಹೃದಯದಲ್ಲಿದ್ದಾನೆ’ ಎಂದು ಹೇಳುತ್ತೀರಿ’. ‘ಹಾಗಾದರೆ ಅವಶ್ಯವಾಗಿ ನನ್ನ ಹೃದಯದಲ್ಲೂ ಇದ್ದೆ ಇದ್ದೀಯೇ’. ‘ಆದರೆ ಏಕೆ ನನಗೆ ನೋಡಸಿಗುವದಿಲ್ಲ ? ನನ್ನ ಮನಸ್ಸೇನೋ ನಿನ್ನಿಂದ ದೂರವಾಗುತ್ತಿದೆ ಮತ್ತು ಪ್ರಪಂಚದ ಕಡೆಗೆ ಓಡೋಡಿಹೋಗುತ್ತಿದೆ, ಎನ್ನುವದು ಸತ್ಯವೇ. ಆದರೂ ಈಗ, ನಿನ್ನಿಂದ ಸಂತರಿಂದ ಮತ್ತು ಮಹಾತ್ಮರ ಕೃಪೆಯಿಂದ ಈ ಪ್ರಪಂಚದಲ್ಲಿ ಸುಖವಿಲ್ಲ, ಶಾಂತಿಯಿಲ್ಲ ಎಂಬುದು ಅರ್ಥವಾಯಿತು ತಂದೆ. ಆದ್ದರಿಂದಲೇ ಎಲ್ಲದರಿಂದ ದುಃಖಗೊಂಡು, ನಿರಾಶೆಗೊಂಡು ನಿನ್ನ ಕಾಲಿಗೆ ಶರಣು ಬಂದೆ. ಇವನನ್ನು ನಿನ್ನವನನ್ನಾಗಿಸೋ. ಪಾಹಿ ಮಾಮ್ ! ಪಾಹಿ ಮಾಮ್ !! ಕಾಪಾಡೋ! ಕಾಪಾಡೋ!!’

೮. ನಿಮ್ಮ ದರ್ಶನಕ್ಕೆ ನನ್ನ ಮನಸ್ಸು  ಚಡಪಡಿಸುತ್ತಿದೆ. ಕಣ್ಣುಗಳು ಕಾತರಗೊಳ್ಳುತ್ತಿವೆ. ಪ್ರಾಣ ವ್ಯಾಕುಲಗೊಳ್ಳುತ್ತಿದೆ. ಈ ಕಿವಿಗಳು ನಿನ್ನ ಬೆಲ್ಲದಂತಹ ಸಿಹಿಸಿಹಿ ಮಾತುಗಳನ್ನು ಕೇಳಲು ಬಯಸುತ್ತಿದೆ. ನನ್ನ ಈ ಎರಡು ಕೈಗಳು ನಿನ್ನ ಕಾಲುಗಳನ್ನು ಹಿಡಿದು ಹೃದಯದ ಮೇಲಿಟ್ಟುಕೊಳ್ಳಲು ಧಡಪಡಿಸುತ್ತಿವೆ. ಹೇ ನಾಥ ! ಓ ಸ್ವಾಮೀ ! ಪ್ರಾಣೇಶ್ವರ ! ಇನ್ನು ಹೆಚ್ಚು ತ್ರಾಸ ಕೊಡಬೇಡಪ್ಪ ! ಕೃಪೆ ಮಾಡು ಕೃಪೆ ಮಾಡು! ಬೇಗನೆ ಪ್ರಕಟವಾಗಿ ದರ್ಶನ ಕೊಡೋ !

೯. ಹೃದಯೇಶ್ವರ, ನನ್ನ ಜೀವನದ ಸರ್ವಸ್ವನೇ, ನಾನು ಎಲ್ಲ ರೀತಿಯಿಂದಲೂ ಅಯೋಗ್ಯ ಅಸಮರ್ಥನಾಗಿದ್ದೇನೆ. ಆದರೂ ನೀನು ಪರಮದಯಾಲು ಆಗಿದ್ದೀಯೆ. ನಿನಗಂತೂ ನನ್ನ ಮೇಲೆ ದಯೆ ತೋರಿಸದೇ ಇದ್ದುಬಿಡಲು ಆಗುವಂತಿಲ್ಲ. ನೀನು ನನ್ನ ಹೃದಯದ ಒಂದೊಂದು ಮಾತು ಹಾಗು ನನ್ನ ಕಣ ಕಣವನ್ನು ತಿಳಿದಿದ್ದೀಯೆ. ನನ್ನ ಮನಸ್ಸು ನಿನ್ನ ದರ್ಶನಕ್ಕಾಗಿ ಬಾಯಾರಿದೆ, ನಿನಗಾಗಿ ಒದ್ದಾಡುತ್ತಿದೆ. ಎಲ್ಲಿ ಬಚ್ಚಿಟ್ಟುಕೊಂಡಿದ್ದೀಯ ? ನಾನು ಅಪರಾಧಿ ಎಂದು ಕೋಪಿಸಿಕೊಂಡಿದ್ದೀಯಾ!! ಪ್ರಭುವೇ! ಪ್ರಭುವೇ! ನನ್ನ ಅಪರಾಧಗಳನ್ನು ನೀನು ನೋಡುತ್ತಾ ಹೋದರೆ ಕೋಟಿ ಕಲ್ಪ ಕಳೆದರೂ ನಾನು ದಾಟಲಾರೆನು. ಆದ್ದರಿಂದ ಓ ಕರುಣಾಸಾಗರ ! ನಿನ್ನ ಅಕಾರಣಕರುಣೆಯ ಒಂದು ಕಣ, ಒಂದು ಬಿಂದುವನ್ನಾದರೂ ನನ್ನ ಮೇಲೆ ಹಾಕು. ನಾನು ನಿನ್ನ ಚರಣಕಮಲದ ಮೇಲೆ ನನ್ನ ತಲೆ ಇಡುತ್ತೇನೆ ಮತ್ತೆ ನೀನು ನಿನ್ನ ಕರಕಮಲವನ್ನು ನನ್ನ ಶಿರಸ್ಸಿನ ಮೇಲೆ ಇಟ್ಟುಬಿಡು. ನಾನು ನನ್ನ ತುಂಬಿದ ಎದೆಯಿಂದ ಒದ್ದೆ ಕಣ್ಣಿನಿಂದ ನಿನ್ನೆಡೆಗೆ ನೋಡಿದಾಗ ನೀನು ಮೃದು ಮೃದುವಾಗಿ ಮುಗುಳುನಗು, ಮತ್ತೆ ನಿನ್ನ ಮಧುರಮಧುರವಾದ ಸ್ವರದಿಂದ ಅಮೃತ ಸುರಿಸುತ್ತಾ ‘ನೀನು ನನ್ನವ, ನನ್ನ ನಿನ್ನ ಸಂಬಂಧ ಅಖಂಡ- ಮುರಿಯಲಾಗದ್ದು’ ಎಂದು ಹೇಳು, ಸಾಕು ನನಗಷ್ಟೇ ಸಾಕು ನನಗೆ ಬೇರಿನ್ನೇನೂ ಬೇಡ.

೧೦. ಅಹಾ! ಇದು ವೃಂದಾವನ! ಕಾಳಿಂದಿಯ ದಡ, ಹಸಿರು ಮರದ ಸಾಲುಗಳು, ಹೂಬಿಟ್ಟ ಬಳ್ಳಿಗಳು, ಲಲಿತವಾದ ಹೂಗೊಂಚಲುಗಳು, ಆದರೆ ಪ್ರಾಣಪ್ರಿಯ, ನೀನಿಲ್ಲದೆ ಎಲ್ಲಾ ಶೂನ್ಯಶೂನ್ಯವಾಗಿ ತೋರುತ್ತಿದೆ. ಕ್ಷಣ ಕ್ಷಣ ಯುಗದಂತೆ ಕಾಣುತ್ತಿದೆ. ಹೃದಯ ವ್ಯಾಕುಲವಾಗುತ್ತಿದೆ. ಅಳು ನಿಲ್ಲುತ್ತಿಲ್ಲ. ಈ ಹೂವಿನ ಮಂಚ ನಿನಗಾಗಿ. ಸುಂದರ ಸುಂದರ ಹೂವಿನಮಾಲೆ ನಿನಗಾಗಿ ಕಟ್ಟಿದೆ. ಭಾವಜಲದಿಂದ ತುಂಬಿದ ನನ್ನ ಹೃದಯದ ಝರಿ ನಿನ್ನ ಕಾಲನ್ನು ಹರಿದು ತೊಳೆಯುವದಕ್ಕೆ ಇದೆ. ಆದರೆ ಹಾ! ಹಾ! ನೀನು ಇಲ್ಲಿಯವರೆಗೂ ಬರಲಿಲ್ಲ. ಹೃದಯ ಒಡೆದುಹೋಗುತ್ತಿದೆ, ಪ್ರಾಣ ಒಣಗುತ್ತಿದೆ. ಇನ್ನು ಒಂದು ಕ್ಷಣವೂ ಇರಲಾರೆ. ನನ್ನ ಜ್ಞಾನ ತಪ್ಪುತ್ತಿದೆ, ಮೂರ್ಛಿತನಾಗುತ್ತಿದ್ದೇನೆ. ಪ್ರಭೋ ಬಾ ಬಾ! ನನ್ನ ಹತ್ತಿರ ಬಾ! ನನ್ನೆದುರು ಪ್ರಕಟನಾಗು. ನನ್ನೆಡೆಗೆ ನೋಡು. ನನ್ನ ಸೇವೆಯನ್ನು ಸ್ವೀಕರಿಸು! ನಿನ್ನವನಾಗಿಸಿಕೊ ನೀನು ನನ್ನವನಾಗು.

ಭಗವಂತನ ಆಗಮನ.
೧೧. ಈ ಸ್ಥಾನವೆಲ್ಲಾ ದಿವ್ಯಗಂಧದಿಂದ ತುಂಬಿಕೊಳ್ಳುತ್ತಾ ಇದೆ! ಈ ಮಧುರಮಧುರ ಸ್ವರತರಂಗ ಎಲ್ಲಿಂದ ಬರುತ್ತಾ ಇದೆ ? ತಂಪು-ತಂಪಾದ ದಿವ್ಯ ಪ್ರಕಾಶ ತುಂಬಿಕೊಳ್ಳುತ್ತಾ ಇದೆ. ಕಾಲ್ಗೆಜ್ಜೆಯ ಇಂಪಾದ ಶಬ್ದಕೇಳಿಬರುತ್ತಿದೆ. ಹಾಗಾದರೆ ಬಂದೇಬಿಟ್ಟನೇ ? ನನ್ನ ಜನ್ಮಜನ್ಮಗಳ ಆಸೆ ಪೂರೈಸುವ ಸಂದರ್ಭ ಬಂದೇಬಿಟ್ಟಿತು. ಧನ್ಯ ಧನ್ಯ , ಅವನೇ. ಹೌದು ಅವನೇ ಹೌದು. ಆಹಾ! ಎಂಥಾ ಗಂಭೀರನಡೆಯಿಂದ ನಡೆದುಬರುತ್ತಿದ್ದಾನೆ. ಓರೆಗಣ್ಣಿನಿಂದ ನೋಡುತ್ತಿದ್ದಾನೆ.  ನನ್ನೆಡೆಗೆ ನೋಡುನೋಡುತ್ತಾ ಮೆಲ್ಲಮೆಲ್ಲಗೆ ಮುಗುಳ್ನಗುತ್ತಿದ್ದಾನೆ. ಬಾ ಪ್ರಭುವೇ ಬಾ. ನನ್ನ ಯುಗ ಯುಗದ ಇಚ್ಛೆಯನ್ನು ಪೂರೈಸು.

೧೨. ಈಶ್ವರನಂತೂ ಹೃದಯದಲ್ಲೇ ಇರುತ್ತಾನೆ. ಎಲ್ಲೂ ಹೋಗುವದೂ ಇಲ್ಲ. ಮತ್ತೆಲ್ಲಿಂದಲೋ ಬರುವದೂ ಇಲ್ಲ. ಮನಸ್ಸು, ಅವನ ಸಮ್ಮುಖವಾದ ಕೂಡಲೇ ಅವನು ಬಂದುಬಿಡುತ್ತಾನೆ. ವಿಮುಖವಾದ ಕೂಡಲೇ ಹೊರಟುಹೋಗುತ್ತಾನೆ. ಆದ್ದರಿಂದಲೇ ಮನಸ್ಸನ್ನು ಅವನ ಸಮ್ಮುಖವಾಗಿಯೇ ಇಟ್ಟುಕೊಳ್ಳಬೇಕು. ವಿಶೇಷವಾಗಿ ಅವನ ಮುಖಕಮಲದ ಮುಗುಳ್ನಗೆ ಮತ್ತು ಅವನ ದೃಷ್ಟಿಯ ಧ್ಯಾನ ಮಾಡಬೇಕು. ಭಗವಂತನ ಮನಸ್ಸಿನಲ್ಲಿ ಅತ್ಯಂತ ಆನಂದವಿದೆ  ಮತ್ತದು ಅವನ ಮುಖಾರವಿಂದದಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಬರುತ್ತಾ ಇದೆ. ಕಣ್ಣುಗಳ ದೃಷ್ಟಿ ಸೇರುತ್ತಾ ಇದೆ ಮತ್ತು ನೋಡುವವನು ಕೂಡ ಆನಂದದಿಂದ ತುಂಬಿ ಹೋಗುತ್ತಿದ್ದಾನೆ.  ಈ ರೀತಿ ಎರಡೂ ಕಡೆಯಿಂದಲೂ ಆನಂದದ ತರಂಗ ಏಳುವದೇ ಭಗವಂತನ ಸ್ವಾಗತ ಎಲ್ಲಿ ಈ ಆನಂದದ ಸ್ವಾಗತವಾಗುತ್ತದೆಯೋ ಭಗವಂತನು ಅಲ್ಲಿಗೆ ಬರುತ್ತಾನೆ ಮತ್ತು ನೆಲೆಸುತ್ತಾನೆ.

೧೩. ಮನವು ಭಗವಂತನ ಸಮ್ಮುಖವೇನೋ ಆಯಿತು ಆದರೆ ಅವನಲ್ಲೇ ಅಂಟಿಕೊಂಡಿರುವದಿಲ್ಲ. ಆಗ ಭಗವಂತನು ಕುಳಿತಿರುವದಾದರೂ ಎಲ್ಲಿ ? ಆದ್ದರಿಂದ, ಶೀತಲಸ್ಥಾನದಲ್ಲಿ ಕೋಮಲ ಕಮಲದ ಮೇಲೆ ಸ್ಥಿರವಾದ ಆಸನವನ್ನು ನೀಡಬೇಕು.

ಶೀತಲ ಎಂದರೆ ಮನಸ್ಸಿನಲ್ಲಿ ಯಾವದೇ ಈರ್ಷ್ಯೆ ಇರಬಾರದು ಎಂದರ್ಥ. ಕೋಮಲ ಎಂದರೆ ಸ್ನೇಹದಿಂದ ನಯವಾಗಿ, ಮೃದುವಾಗಿರುವದು ಎಂದರ್ಥ. ಸ್ಥಿರ ಎಂದರೆ ಮನಸ್ಸಿನ ಚಾಂಚಲ್ಯವಿರದಿರುವದು ಎಂದರ್ಥ. ಅಲುಗಾಡುವ ಆಸನ ಒಳ್ಳೆಯದಲ್ಲವಲ್ಲವೆ.

೧೪. ಸ್ನೇಹದ ಜಲ, ಶ್ರದ್ಧೆಯ ಹೂವು, ಭಾವದ ಅಕ್ಷತೆ, ಸದ್ಗುಣಗಳ ಸುಗಂಧ, ಸಂಬಂಧದ ಮಧು ತೆಗೆದುಕೊಂಡು ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಮುಂತಾದ ಕ್ರಿಯೆಗಳನ್ನು ಮಾಡಬೇಕು.

ಪಾದ್ಯ - ಭಗವಂತನ ಕಾಲನ್ನು ಪ್ರೇಮದಿಂದ ತೊಳೆಯುವದು. ಅರ್ಘ್ಯ - ಭಗವಂತನ ಕರಕಮಲದಲ್ಲಿ ನೀರು, ಹೂವು, ದೂರ್ವೆ ಇತ್ಯಾದಿಗಳನ್ನು ಅರ್ಪಿಸಿ ಕೈಗಳನ್ನು ತೊಳೆಸುವುದು. ಆಚಮನೀಯ- ಮುಖವನ್ನು ತೊಳೆಸುವುದು. ಮಧುಪರ್ಕ- ಸತ್ಕಾರದ ಒಂದು ರೀತಿ. ಇದನ್ನು ಆದರಣಿಯ ವ್ಯಕ್ತಿಗಳಿಗೆ ಜೇನನ್ನು ನೀಡಿ ಮಾಡಲಾಗುವದು. ಭಗವಂತನ ಪೂಜೆಯಲ್ಲಿ ಅವನೊಂದಿಗೆ -- ತಾಯಿ, ತಂದೆ, ಒಡೆಯ, ಗಂಡ, ಮಗ, ಗುರು ಮುಂತಾದ ಯಾವ ಮಧುರವಾದ ಸಂಬಂಧವಿದೆಯೋ ಅದೆ ಜೇನಿನ ಮಧುರತೆಗೆ ಸಮಾನವಾದದ್ದಾಗಿದೆ.

೧೫. ಭಗವಂತ ನಿತ್ಯ ಶುದ್ಧನು. ಅವನಿಗೆ ಸ್ನಾನದ ಆವಶ್ಯಕತೆ ಇಲ್ಲ. ಮಾಯೆಯ ಮೈಲಿಗೆ ಅವನನ್ನು ಮುಟ್ಟಲಾಗದು, ಆದರೂ ಭಕ್ತರ ಸೇವೆಯನ್ನು ಸ್ವೀಕರಿಸಿ ಅವರಿಗೆ ಸಂತೋಷವನ್ನು ಉಂಟುಮಾಡುವದಕ್ಕಾಗಿ ಅವರ ಕೈಗಳಿಂದ ಸ್ನಾನವನ್ನು ಮಾಡುತ್ತಾನೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಶುದ್ಧಜಲದಿಂದ ಸ್ನಾನಮಂಟಪದಲ್ಲಿ ರತ್ನಸಿಂಹಾಸನದಿಂದಲ್ಲಿ ಕೂರಿಸಿ ಸ್ನಾನವನ್ನು ಮಾಡಿಸಬೇಕು. ಭಗವಂತನು ಚಿನ್ಮಯನಾದ್ದರಿಂದ ಅವನು ಎಲ್ಲಿರುತ್ತಾನೊ ಅಲ್ಲಲ್ಲಿಯೆ ಹೊಸಹೊಸದಾದ ಸ್ನಾನಮಂಟಪ, ಶೃಂಗಾರಮಂಟಪ, ಭೋಜನಮಂಟಪ, ಶಯನ ಮಂಟಪ, ವಿಹಾರ ಮಂಟಪ, ಸಭಾಮಂಟಪ ಮುಂತಾದವುಗಳು ಕಾಲ ಕಾಲಕ್ಕೆ ತಾವೇ ಪ್ರಕಟವಾಗುತ್ತಿರುವವು. ಭಗವಂತನಿಗೆ ಚಳಿ ಮತ್ತು ಶೆಖೆ ಕೂಡ ಭಾಸವಾಗುತ್ತವೆ. ಭಗವಂತನ ಭಾವವನ್ನು ಅವನ ಕಣ್ಣು ಮತ್ತು ಇಂಗಿತದಿಂದ ಅರ್ಥೈಸಿಕೊಂಡು ಅಥವಾ ಅವನ ಆಜ್ಞಾನುಸಾರವಾಗಿ ತಂಪಾದ ಅಥವಾ ಬಿಸಿ ನೀರಿನಿಂದ ಸ್ನಾನವನ್ನು ಮಾಡಿಸಬೇಕು. ಮಾನಸಪೂಜೆಯಲ್ಲಿ ಸ್ನಾನವನ್ನು ಮಾಡಿಸದಿದ್ದರೂ ಯಾವದೇ ತೊಂದರೆಯೂ ಇಲ್ಲ.

೧೬. ಭಗವಂತನ ವಸ್ತ್ರವು ಕೂಡ ಐದುಬಣ್ಣಗಳಿಂದ ಕೂಡಿರಬೇಕು, ಪೃಥ್ವಿಯ ಹಳದಿ, ಜಲದ ಶ್ವೇತ, ಅಗ್ನಿಯ ಕೆಂಪು, ವಾಯುವಿನ ನೇರಳೆ, ಮತ್ತು ಆಕಾಶದ ನೀಲಿ. ಎಲ್ಲಾ ತತ್ತ್ವಗಳ ಯಾವ ಶ್ರೇಷ್ಠವಾದ ಮತ್ತು ಸಾರವಾದ ಅಂಶವಿದೆಯೋ ಅವನ್ನು ತೆಗೆದುಕೊಂಡು ಬಣ್ಣವು ಉಂಟಾಗುತ್ತದೆ. ಅಹಂಕಾರದ ಹತ್ತಿ, ಬುದ್ಧಿಯೆಂಬ ದಾರ, ಮನಸ್ಸಿನ(ಅಂಟಿಕೊಳ್ಳುವ ಸ್ವಭಾವದ)ಲ್ಲಿರುವ ಅಂಟು, ಐದು ತತ್ತ್ವಗಳ ಬಣ್ಣ ಇವುಗಳಿಂದ ವಸ್ತ್ರವನ್ನು ಮಾಡಿ ಭಾವದಿಂದ ಧಾರಣೆ ಮಾಡಿಸಬೇಕು. ಸಂಬಂಧವೆಂಬ ಯಜ್ಞೋಪವೀತ, ಅನುರಾಗವೆಂಬ ಅಂಗರಾಗ, ಶೀತಲತೆ ಎಂಬ ಚಂದನ ಮತ್ತು ಚೈತನ್ಯದ ಒಡವೆಗಳು (ಆಭರಣ) ಹಾಗೆಯೇ ಭಾವವೆಂಬ ಐದುಬಣ್ಣಗಳ ಹೂಮಾಲೆ ಇವುಗಳನ್ನು ತೊಡಿಸಿ ಭಗವಂತನಿಗೆ ತನ್ನ ಹೃದಯದ ದರ್ಪಣ ತೋರಿಸಬೇಕು.

೧೭. ಮೂರು ಗುಣಗಳ ಧೂಪವನ್ನು ಹೊತ್ತಿಸಿ ಅದರಲ್ಲಿ ಯಾವ ವ್ಯಾಪಕ ಬ್ರಹ್ಮನ ಸತ್ತೆಯಿದೆಯೋ ಅದರ ಹರಡಿದ ಸುಗಂಧದ ಅನುಭವ ಮಾಡಿಕೊಳ್ಳಬೇಕು ಮತ್ತು ಜ್ಞಾನದ ದೀಪವನ್ನು ಹೊತ್ತಿಸಿ ಅದರ ಪ್ರಕಾಶದಲ್ಲಿ ಭಗವಂತನ ಝಗಮಗಿಸುತ್ತಿರುವ ಆಭರಣ ಮತ್ತು ಹೊಳೆಯುತ್ತಿರುವ ದೇಹಕಾಂತಿಯನ್ನು ನೋಡಿ ಆನಂದಿತನಾಗಬೇಕು.

೧೮. ಪೃಥಿವಿಯ ಸುಗಂಧ, ಜಲದ ಮಧುರತೆ, ಅಗ್ನಿಯ ಸೌಂದರ್ಯ, ವಾಯುವಿನ ಕೋಮಲ ಸ್ಪರ್ಶ ಇವೆಲ್ಲವನ್ನು ಸೇರಿಸಿ ಹೃದಯಾಕಾಶದಲ್ಲಿ ಭಾವದಿಂದ ಬೇಯಿಸಿದ ಪ್ರೇಮದ ನೈವೇದ್ಯವನ್ನು ಭಗವಂತನಿಗೆ ತೋರಿಸಬೇಕು. ಭಗವಂತನು ನೋಡಿ ಸೇವಿಸಿ ಪ್ರಸನ್ನನಾಗುತ್ತಾನೆ. ಯಾವದಾದರು ಪದಾರ್ಥವು ಇಷ್ಟವಾದರೆ ಸ್ವಲ್ಪ ಹೆಚ್ಚು ಕೇಳುತ್ತಾನೆ. ಕೆಲವೊಮ್ಮೆ ಅವನ ದೃಷ್ಟಿಯನ್ನು ಕಣ್ಣು ಸಂಧಿಸಿದಾಗ ಅವನ ಪ್ರಸನ್ನತೆಯನ್ನು ನೋಡಿ ತನ್ನ ಹೃದಯ ಆನಂದದಿಂದ ತುಂಬಿ ಹೋಗುತ್ತದೆ. ಅವನ ಸುಖದಲ್ಲಿಯೇ ತನ್ನ ಸುಖವಿದೆ. ನಂತರ ಬಾಯಿ ಘಮಗೊಡಲು ಸುಗಂಧ ಪದಾರ್ಥವನ್ನು ಕೊಡಬೇಕು (ತಾಂಬೂಲ).

೧೯. ಲೋಕದ ಎಲ್ಲಾ ಬಾಹ್ಯ ಸಂಪತ್ತು, ಶರೀರ, ಪ್ರಾಣ, ಇಂದ್ರಿಯ, ಮನಸ್ಸು- ಮನಸ್ಸಿನಲ್ಲಿರುವ ಸಂಕಲ್ಪ, ಅಹಂಕಾರ, ಮಮತೆ, ಸಂಬಂಧ ಮುಂತಾದ ಎಲ್ಲವು, ಹಾಗೆಯೇ ಬುದ್ಧಿ- ಅದರಲ್ಲಿರುವ ವಿಚಾರ, ನಿಶ್ಚಯ ಮುಂತಾದವು, ಜೀವನು ಮೊದಲು ಹೇಗೆ ಇದ್ದ, ಈಗ ಹೇಗಿರುವನು, ಮುಂದೆ ಏನಾಗುವನು ಇವೆಲ್ಲವು ಭಗವಂತನೇ ಹೌದು. ಈ ಸತ್ಯ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳುವದು, ಒಪ್ಪಿಕೊಳ್ಳುವದು ಮತ್ತು ನೆನಪಿಟ್ಟುಕೊಳ್ಳುವದು, ಎಂದೆಂದೂ ಮರೆಯದಿರುವದು- ನಿರಂತರ ಅನುಭವವಾಗುವದು ಇದೇ ಭಗವಂತನಿಗೆ ಮಾಡುವ ಆತ್ಮಸಮರ್ಪಣ.

೨೦. ಆರತಿಯಲ್ಲಿ ಐದು ವಸ್ತುಗಳು ಇರುತ್ತವೆ. ಪೃಥಿವಿಯ ಗಂಧ, ಜಲದ ಸ್ನೇಹಧಾರೆಯಾದ ತುಪ್ಪ, ಅಗ್ನಿಯ ಜ್ವಾಲೆ, ವಾಯುವಿನ ಅಲುಗಾಟ, ಆಕಾಶದ ಧ್ವನಿ. ಈಡೀ ಜಗತ್ತಿನಿಂದಲೇ ಭಗವಂತನ ಆರತಿಯಾಗುತ್ತದೆ. ಹಾಗೆಯೇ ತನ್ನ ದೇಹವೆಂಬ ದೀಪ, ಜೀವನದ ತುಪ್ಪ, ಪ್ರಾಣವೆಂಬ ಬತ್ತಿ, ಆತ್ಮವೆಂಬ ಜ್ವಾಲೆ ಇವುಗಳನ್ನಿಟ್ಟು ಭಗವಂತನ ಸೂಚನೆಯಂತೆ ಕುಣಿಯುವದು ಇದೇ ಆರತಿಯಾಗಿದೆ. ಈ ರೀತಿಯ ನಿಜವಾದ ಆರತಿಯನ್ನು ಮಾಡುವದರಿಂದ ಸಂಸಾರಬಂಧನ ಮುರಿದು ಹೋಗುತ್ತದೆ ಮತ್ತು ಜೀವನಿಗೆ ಭಗವಂತನ ದರ್ಶನವುಂಟಾಗಲು ಮೊದಲಾಗುತ್ತದೆ.


ಈಶ್ವರನಿಗೆ ನಮ್ಮ ಮನದಲ್ಲಿ ಯಾವ ಉತ್ತಮೋತ್ತಮ ಭಾವಗಳು ಹುಟ್ಟುವದಕ್ಕೆ ಶುರುವಾಗುತ್ತದೆಯೋ ಅದೇ ಪುಷ್ಪ. ಕೆಲವೊಮ್ಮೆ ಅವನ ಅಸ್ತಿತ್ವದ ಅನುಭವ ಮಾಡಿಕೊಂಡು ಶಾಂತನಾಗುವದು, ಕೆಲವೊಮ್ಮೆ ಅವನ ಸೇವೆಮಾಡುವದು, ಕೆಲವೊಮ್ಮೆ ಅವನೊಂದಿಗೆ ಮಿತ್ರನಂತೆ ನಗುವದು-ಆಟವಾಡುವದು, ಮಾತನಾಡಿಸುವದು, ಕೆಲವೊಮ್ಮೆ ಮುಗ್ಧವಾದ ಶಿಶುವಿನಂತೆ ವಾತ್ಸಲ್ಯದಿಂದ ಉಣ್ಣಿಸುವದು, ನೀರು ಕುಡಿಸುವದು, ಮುದ್ದುಮಾಡುವದು, ಕೆಲವೊಮ್ಮೆ ಪತ್ನಿಯ ಸಮಾನವಾಗಿ ಪ್ರೇಮಿಸುವದು - ಇವೆಲ್ಲವುಗಳೆ ಭಾವವಾಗಿದೆ. ಈ ಭಾವಗಳನ್ನೇ ಮತ್ತೆ ಮತ್ತೆ ಭಗವಂತನ ಜೊತೆಗೆ ಸೇರಿಸುವದು ಇದನ್ನೇ ಪುಷ್ಪಾಂಜಲಿ ಎನ್ನುತ್ತಾರೆ. ಇವೆಲ್ಲವನ್ನು ಮಾಡುತ್ತಾ ಮಾಡುತ್ತಾ ಆನಂದಸಮುದ್ರದಲ್ಲಿ ಮುಳುಗುತ್ತ ಹೋಗುವಂತೆ ಭಗವಂತನನ್ನೇ ಸೇರಿಬಿಡುವದು. ಈ ರೀತಿ ಮುಳುಗುವದು ಮತ್ತು ಅವನಲ್ಲೇ ತೇಲುವದು ಇದೇ ಭಗವಂತನ ಮಾನಸಿಕ ಸೇವೆ-ಪೂಜೆ.